ಧಾರವಾಡ: ಮದಿಹಾಳದಲ್ಲಿ ಮನೆ ಮನೆಗೆ ಪೋಲೀಸರಿಂದ ಜಾಗೃತಿ ಕಾರ್ಯಕ್ರಮಧಾರವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮದಿಹಾಳದಲ್ಲಿ ಮನೆ ಮನೆಗೆ ಪೋಲೀಸರು ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು. ಗಾಯಕವಾಡ ಹಾಲ್ ಸುತ್ತಮುತ್ತಲಿನ ನಿವಾಸಿಗಳಿಗೆ ಕಾನೂನು ಬಾಹಿರ ಚಟುವಟಿಕೆ ಹಾಗೂ ಸುರಕ್ಷತೆ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮದಿಹಾಳ ನಿವಾಸಿಗಳು, ಹಿರಿಯ ನಾಗರಿಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಅವರು ತಮ್ಮ ಪಕ್ಕಪಕ್ಕದ ಮನೆಗಳಲ್ಲಿ ನಡೆಯುವ ಶಂಕಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು. ಜಗಳ, ಅನೈತಿಕ ಚಟುವಟಿಕೆಗಳು, ಕಳ್ಳತನ, ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ 112 ನಂಬರಿಗೆ ಕರೆ ಮಾಡುವಂತೆ ಪೋಲೀಸರು ಮನವಿ ಮಾಡಿದರು.
ಏಕಾಂಗಿಯಾಗಿರುವ ಮಹಿಳೆಯರು ಬಹುಮೌಲ್ಯ ಆಭರಣ ಧರಿಸುವುದು, ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನ ಮೊತ್ತದ ಹಣ ಮತ್ತು ಬಂಗಾರವನ್ನು ಮನೆಯಲ್ಲಿ ಇಡುವುದು ಈ ಎಲ್ಲವನ್ನೂ ತಪ್ಪಿಸಿಕೊಳ್ಳುವ ಸಲಹೆಗಳನ್ನು ಪೋಲೀಸರು ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಎಸಿಪಿ ಪ್ರಶಾಂತ್ ಸಿದ್ಧನಗೌಡ್ರು, ಶಹರ ಠಾಣೆಯ ಸಿಪಿಐ ನಾಗೇಶ್ ಕಾಡದೇವರಮಠ, ಪಿಎಸ್ಐ ವಿನೋದ್, ಪಿಎಸ್ಐ ನದಾಫ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಬಿರಾದರ್, ತುಕಾರಾಂ, ಸಂತೋಷ್ ಪೂಜಾರ್, ಉಪಸ್ಥಿತರಿದ್ದರು.